ನದಿಗಳ ಜೋಡಣೆ, ಕುಡಿಯುವ ನೀರಿಗೆ ಮೊದಲ ಆದ್ಯತೆ....ಚಿಕ್ಕಬಳ್ಳಾಪುರ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ






ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಬಿ.ಎನ್. ಬಚ್ಚೇಗೌಡ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಚಾಲಕ, ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯ ಡಿ.ಪಿ.ವಿ.ಕನ್ವೆನ್ಷನ್ ಹಾಲ್ ನಲ್ಲಿ ದಿನಾಂಕ 22-03-2019 ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆ ಹಾಗೂ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಬಿ.ಎನ್. ಬಚ್ಚೇಗೌಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ಕ್ಷೇತ್ರದ ಎಲ್ಲಾ ಎಂಟು ತಾಲ್ಲೂಕುಗಳೂ ಬಿನ್ನವಾಗಿವೆ, ಒಂದೊಂದು ತಾಲ್ಲೂಕಿನಲ್ಲೂ ಒಂದೊಂದು ರೀತಿಯ ಸಮಸ್ಯೆಗಳಿವೆ, ಆಯಾ ತಾಲ್ಲೂಕಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು, ಒಟ್ಟು 18 ಲಕ್ಷ ಮತದಾರರು ಇರುವ ಈ ಎಂಟು ಕ್ಷೇತ್ರದಲ್ಲೂ ಕುಡಿಯುವ ನೀರಿನ ಸಮಸ್ಯೆ ಮುಖ್ಯವಾಗಿದೆ, ಬರಗಾಲ ಪೀಡಿತ ಪ್ರದೇಶಗಳಾಗಿರೋ ಈ ತಾಲ್ಲೂಕುಗಳಿಗೆ ನೀರು ಒದಗಿಸುವುದಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು ಎಂದರು. ಎತ್ತಿನಹೊಳೆ ಯೋಜನೆಗೆ ಮೊದಲಬಾರಿಗೆ ಯಡಿಯೂರಪ್ಪನವರು ಕೊಟ್ಟ ಹಣ 8500 ಕೋಟಿ, ಆ ಯೋಜನೆ ಇನ್ನೂ ಕಾರ್ಯಗತವಾಗಿಲ್ಲ, ಎತ್ತಿನ ಹೊಳೆಯಲ್ಲಿ ನೀರು ಎಷ್ಟು ಇದೆ ಎಂಬ ಮಾಹಿತಿ ಇಲ್ಲ, ಹೇಗೆ ಬರುತ್ತದೆ ಎಂದೂ ಗೊತ್ತಿಲ್ಲ, ನಮ್ಮ ದೇಶದಲ್ಲಿ ಮೊದಲು ನದಿ ಜೋಡಣೆ ಆಗಬೇಕು, ಮೇಕೆದಾಟು ಯೋಜನೆಯಿಂದ ತುಂಬಾ ಅನುಕೂಲವಾಗುತ್ತದೆ. ಈಗಿರುವ ಲೋಕಸಭಾ ಸದಸ್ಯರು ತಮ್ಮ ಒಟ್ಟು ಹತ್ತು ವರ್ಷಗಳ ಅವಧಿಯಲ್ಲಿ ಅವರಿಗೆ ನೀಡುವ 50 ಕೋಟಿ ಅನುದಾನದ ಹಣ ಏನಾಯ್ತು? ಯಾವುದಕ್ಕೆ ನೀಡಿದ್ದಾರೆ ಒಂದೂ ಗೊತ್ತಿಲ್ಲ ಎಂದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಪ್ರಭಾರಿ ಸಚ್ಚಿದಾನಂದಮೂರ್ತಿ, ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಬಾಜಪ ನೇಕಾರ ಪ್ರಕೋಷ್ಠ ರಾಜ್ಯಾಧ್ಯಕ್ಷ ಡಾ.ಜಿ.ರಮೇಶ್, ತಾ.ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಮಾಜಿ ಶಾಸಕ ನರಸಿಂಹಸ್ವಾಮಿ, ನಗರ ಅಧ್ಯಕ್ಷ ರಂಗರಾಜು, ಹಿರಿಯ ನಾಯಕ ಸತ್ಯನಾರಾಯಣಗೌಡ, ಜೋ.ನಾ.ಮಲ್ಲಿಕಾರ್ಜುನ್, ನಗರಸಭಾ ಸದಸ್ಯರಾದ ಶಿವಶಂಕರ್, ಮುದ್ದಪ್ಪ, ಚಂದ್ರಶೇಕರ್, ನಂಜಪ್ಪ, ಆಂಜಿನಪ್ಪ, ಬೆಂ.ಗ್ರಾ.ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ವತ್ಸಲ, ಪ್ರಧಾನ ಕಾರ್ಯದರ್ಶಿ ಪುಷ್ಪ ಶಿವಶಂಕರ್, ತಾ.ಪಂ. ಸದಸ್ಯೆ ಅನ್ನಪೂರ್ಣಮ್ಮ ಮತ್ತಿತರರು ಹಾಜರಿದ್ದರು.
ಪತ್ರಿಕಾಗೋಷ್ಠಿ ಪ್ರಾರಂಭದಲ್ಲಿ ಮಾಜಿ ಕೇಂದ್ರ ರಕ್ಷಣಾ ಸಚಿವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ರವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಗೆ ದೊಡ್ಡಬಳ್ಳಾಪುರ ತಾಲ್ಲೂಕು ಹಾಗೂ ನಗರದ ಎಲ್ಲಾ ಬಿಜೆಪಿ ಪಕ್ಷದ ಪದಾಧಿಕಾರಿಗಳು, ವಿವಿಧ ಮೋರ್ಚಾದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಗಾಹಿಸಿದ್ದರು. ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನಾಗರಾಜ್ ಸ್ವಾಗತಿಸಿದರೆ, ರಾಮಕೃಷ್ಣ ನಿರೂಪಣೆ ಮಾಡಿದರು.
Comments