ಉಚಿತ ಔಷಧಿ ವಿತರಣಾ ವಾಹನಕ್ಕೆ ಚಾಲನೆ ಕೊಟ್ಟ ಎಚ್ ಡಿಕೆ

ಜನರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ‘ಕುಮಾರ ರಕ್ಷಾ ಜನಸೇವಾ’ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣಾ ವಾಹನಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಉಮೇಶ್ ಕುಮಾರ್ ಅವರ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಬಡಜನರ ಉಪಯೋಗಕ್ಕಾಗಿ ಬುಧವಾರ ನಗರದ ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ಚಾಲನೆ ದೊರೆಯಿತು. ಬಳಿಕ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜನತಾದರ್ಶನಕ್ಕೆ ಬರುತ್ತಿದ್ದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಸಾವಿರಾರು ಬಡವರ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಸರಕಾರ ಮತ್ತು ಪಕ್ಷದ ವತಿಯಿಂದ ನೆರವಾಗಿದ್ದೇವೆ ಎಂದು ಹೇಳಿದರು.
ಉಪಾಧ್ಯಕ್ಷ ಉಮೇಶ್ಕುಮಾರ್ ಮಾತನಾಡಿ, ನಾಡಿನ ಎಲ್ಲೆಡೆ ಸಂಚರಿಸಲಿರುವ ಈ ಉಚಿತ ಮೊಬೈಲ್ ಆರೋಗ್ಯ ತಪಾಸಣಾ ವಾಹನದಲ್ಲಿ ಡಯಾಬಿಟಿಕ್ ರಕ್ತ ಪರೀಕ್ಷೆ, ಎಕ್ಸ್ ರೇ ಸೇರಿದಂತೆ ಹಲವು ಆರೋಗ್ಯ ಸೇವೆಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.ಬಡ ಜನರು ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಪಡೆಯಲು ಅನುಕೂಲವಾಗುವಂತಹ ಮೊಬೈಲ್ ವಾಹನಗಳ ಸೇವೆಯನ್ನು ಆರಂಭಿಸಿದ್ದೇವೆ. ಈ ಆರೋಗ್ಯ ತಪಾಸಣಾ ವಾಹನಗಳು ಮೊದಲ ಹಂತದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಚರಿಸಲಿವೆ. ಮುಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆ ಸೇವೆಯನ್ನು ವಿಸ್ತರಿಸುವ ಯೋಜನೆ ನಮ್ಮದಾಗಿದೆ ಎಂದು ಹೇಳಿದರು.ಈ ವೇಳೆ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಸೇರಿ ಪ್ರಮುಖರು ಉಪಸ್ಥಿತರಿದ್ದರು.
Comments