ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ರೈತರು..! ಅಷ್ಟಕ್ಕೂ ಪತ್ರದಲ್ಲೇನಿದೆ..?

ಇತ್ತಿಚಿಗಷ್ಟೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯ ಜಿಲ್ಲೆಯಲ್ಲಿ ನಾಟಿ ಮಾಡುವುದರ ಮೂಲಕ ರೈತರಿಗೆ ಕೃಷಿ ಮಾಡುವಲ್ಲಿ ಪ್ರೋತ್ಸಾಹವನ್ನು ತುಂಬಿದರು. ಇದರ ಬೆನ್ನಲೆ ಇದೀಗ ಹಾಸನದ ರೈತರು ದಯಾಮರಣ ಕೋರಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ರಕ್ತದಲ್ಲಿ ಪತ್ರವನ್ನು ಬರೆದಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಪಂಚಾಯಿತಿ ವ್ಯಾಪ್ತಿಯ ರೈತರು, ಕೆರೆ ಕಟ್ಟೆಗೆ, ದನ ಕರುಗಳಿಗೆ ನೀರು ನೀಡಿ ಇಲ್ಲಾ ದಯಾಮರಣ ನೀಡಿ ಎಂದು ರಕ್ತದಲ್ಲಿ ಕುಮಾರಸ್ವಾಮಿಯವರಿಗೆ ಪತ್ರವನ್ನು ಬರೆದಿದ್ದಾರೆ. ಚನ್ನಪಟ್ಟಣ ತಾಲೂಕಿನ ಬಾಗೂರು ಹೋಬಳಿ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಅಂತರ್ಜಲವು ಕೂಡ ಸಂಪೂರ್ಣವಾಗಿ ಕುಸಿದಿದೆ. ಈ ಸಮಸ್ಯೆ ಕಳೆದ ಮೂರು ದಶಕಗಳಿಂದಲೂ ಕೂಡ ಮುಂದುವರೆದಿದೆ. ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ನೀರು ಹರಿಯುವ ಬಾಗೂರು ಸುರಂಗ ಮಾರ್ಗ ಇಲ್ಲಿ ಹಾದು ಹೋಗಿದೆ. ಈ ಕಾರಣಕ್ಕಾಗಿ ಹಲವು ಗ್ರಾಮಗಳಲ್ಲಿ ಅಂತರ್ಜಲ ಕುಸಿಯಲು ಕಾರಣವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
Comments