ನಾಮಪತ್ರ ಹಿಂಪಡೆಯಲು ಇಂದು ಕೊನೆ ದಿನ- ಅಂತಿಮವಾಗಲಿದೆ ಚುನಾವಣಾ ಚಿತ್ರಣ

ರಾಜ್ಯ ವಿಧಾನಸಭಾ ಚುನಾವಣೆಗೆ ಸಲ್ಲಿಸಿರುವ ನಾಮಪತ್ರಗಳನ್ನು ಹಿಂಪಡೆಯಲು ಇಂದು ಅಂತಿಮ ದಿನವಾಗಿದ್ದು, ಸಂಜೆಯ ಹೊತ್ತಿಗೆ ಅಧಿಕೃತವಾಗಿ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಪಟ್ಟಿಯು ಹೊರಬೀಳಲಿದೆ.
ಕಾಂಗ್ರೆಸ್ ಜೆಡಿಎಸ್,ಬಿಜೆಪಿ, ಪಕ್ಷೇತರರು ಹಾಗೂ ಇತರರು ಸೇರಿ ಈಗಾಗಲೇ 3,374 ಅಭ್ಯರ್ಥಿಗಳು ನಾಮಪತ್ರ ವನ್ನು ಸಲ್ಲಿಸಿದ್ದಾರೆ. ಇಂದು ಸಂಜೆವರೆಗೆ ನಾಮಪತ್ರವನ್ನು ಹಿಂಪಡೆಯಲು ಕಾಲಾವಕಾಶ ಇದೆ. ಬಳಿಕವಷ್ಟೇ ಅಖಾಡದಲ್ಲಿರುವ ಅಭ್ಯರ್ಥಿಗಳ ಅಧಿಕೃತ ಮಾಹಿತಿ ಲಭ್ಯವಾಗುತ್ತದೆ. ಚುನಾವಣಾ ಆಯೋಗವು ಈಗಾಗಲೇ ನಾಮಪತ್ರ ಪರಿಶೀಲನೆಯ ಕಾರ್ಯ ನಡೆಸಿದೆ, ತಿರಸ್ಕೃತ ಅಭ್ಯರ್ಥಿಗಳ ಒಟ್ಟಾರೆ ಮಾಹಿತಿಯನ್ನು ಕಲೆ ಹಾಕುವಲ್ಲಿ ಆಯೋಗ ಸಿಬ್ಬಂದಿ ನಿರತರಾಗಿದ್ದಾರೆ. 3.374 ಅಭ್ಯರ್ಥಿಗಳ ಪೈಕಿ 3115 ಪುರುಷ ಅಭ್ಯರ್ಥಿಗಳು, 259 ಮಹಿಳಾ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ. ಚುನಾವಣಾ ಅಖಾಡದಲ್ಲಿರುವ ಅಭ್ಯರ್ಥಿಗಳ ಹೆಸರು ಪ್ರಕಟಗೊಂಡ ಬಳಿಕ ಚುನಾವಣಾ ಪ್ರಚಾರ ಮತ್ತಷ್ಟುಕಾವೇರಲಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಟಿಕೆಟ್ ವಂಚಿತರು ಬಂಡಾಯವಾಗಿ ಕಣಕ್ಕಿಳಿದಿದ್ದು, ಅವರ ನಾಮಪತ್ರ ಹಿಂಪಡೆಯುವ ಬಗ್ಗೆ ಮನವೊಲಿಕೆ ಕೆಲಸ ನಡೆಯುತ್ತಿದೆ. ಒಂದು ವೇಳೆ ಬಂಡಾಯ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯದಿದ್ದರೆ ಅವರನ್ನು ಪಕ್ಷದ ಅಭ್ಯರ್ಥಿಗಳು ಕಣದಲ್ಲಿ ಎದುರಿಸಬೇಕಾಗುತ್ತದೆ. ಈ ಬಾರಿಯ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲ್ಲಿದ್ದು ಯಾರ ಪಾಲಿಗೆ ಅಧಿಕಾರದ ಗದ್ದುಗೆ ಒಲಿಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
Comments