ದೇವೇಗೌಡರ ತವರೂರಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದವಾದ ಜೆಡಿಎಸ್..!!



ಹಾಸನ : ಜೆಡಿಎಸ್ ಈಗಾಗಲೇ ತನ್ನ ಶಕ್ತಿ ಪ್ರದರ್ಶನದಲ್ಲಿ ಬಹುಪಾಲು ಗೆದ್ದಿದೆ ಎನ್ನುವುದಕ್ಕೆ ಸಾಕ್ಷಿ ವಿಕಾಸಪರ್ವದಲ್ಲಿ ಸೇರಿದ ಜನಸಾಗರ. ಆದರೆ ಜೆಡಿಎಸ್ ಮತ್ತೊಮ್ಮೆ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಸಂಜೆ 4 ಗಂಟೆಗೆ ನಡೆಯುವ ‘ವಿಕಾಸ ಪರ್ವ’ ಜಿಲ್ಲಾ ಸಮಾವೇಶದಲ್ಲಿ ಲಕ್ಷಕ್ಕೂಅಧಿಕ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆದ್ದರಿಂದ ಬೇಕಾದ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಪಿಜಿಆರ್ ಸಿಂಧ್ಯ, ಬಂಡೆಪ್ಪ ಕಾಶಂಪೂರ್ ಹಾಗೂ ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ.
ಭಾನುವಾರ ಸಂಜೆಯ ವೇಳೆಯಲ್ಲಿ ಸಂಸದ ಎಚ್.ಡಿ.ದೇವೇಗೌಡ, ಎಚ್.ಡಿ.ರೇವಣ್ಣ, ಶಾಸಕರಾದ ಎಚ್.ಎಸ್.ಪ್ರಕಾಶ್, ಪಟೇಲ್ ಶಿವರಾಂ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸತೀಶ್ ಹಾಗೂ ಸ್ಥಳೀಯ ನಾಯಕರು ಕ್ರೀಡಾಂಗಣಕ್ಕೆ ಭೇಟಿ ನೀಡಿ ಸಿದ್ಧತಾ ಕಾರ್ಯ ಪರಿಶೀಲಿಸಿ, ಕೆಲವು ಸೂಚನೆ ನೀಡಿದರು. ಸೋಮವಾರ ಮಧ್ಯಾಹ್ನ 2 ಗಂಟೆಗೆ ಬೈಕ್ ರ್ಯಾಲಿ ಆಯೋಜಿಸಲಾಗಿದ್ದು, ನಗರದ ಹಾಲಿನ ಡೇರಿ ವೃತ್ತದಿಂದ ಹೊರಡುವ ರ್ಯಾಲಿ ಬಿ.ಎಂ. ರಸ್ತೆ ಮೂಲಕ ಎನ್.ಆರ್.ಸರ್ಕಲ್, ಹಳೇ ಬಸ್ ನಿಲ್ದಾಣ ರಸ್ತೆ, ಸಾಲಗಾಮೆ ರಸ್ತೆ ಮೂಲಕ ಕ್ರೀಡಾಂಗಣ ತಲುಪಲಿದೆ ಎಮದು ಹೇಳಲಾಗಿದೆ. ‘ಸಮಾವೇಶದಲ್ಲಿ ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಹಾಗೂ ಕೇಂದ್ರ, ರಾಜ್ಯ ಸರ್ಕಾರ ಅಡ್ಡಿಪಡಿಸಿದ ಕಾಮಗಾರಿಗಳ ಬಗ್ಗೆ ಜನರಿಗೆ ತಿಳಿಸಲಾಗುವುದು’ ಎಂದು ಶಾಸಕ ಎಚ್.ಡಿ.ರೇವಣ್ಣ ಅವರು ಈ ಸಂದರ್ಭದಲ್ಲಿ ತಿಳಿಸಿದರು.
Comments