ಸರ್ವಪಕ್ಷ ಸಭೆಗೆ ಹೋರಾಟಗಾರರನ್ನು ಆಹ್ವಾನಿಸಿಲ್ಲವೆಂದು ಜೆಡಿಎಸ್ ಶಾಸಕ ಕೋನರೆಡ್ಡಿ ಕಿಡಿ

ಮಹದಾಯಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಕರೆದಿದ್ದ ಸರ್ವಪಕ್ಷಗಳ ಸಭೆಗೂ ಮುನ್ನ ಜೆಡಿಎಸ್ ಶಾಸಕ ಕೋನರೆಡ್ಡಿ ಮತ್ತು ಸರ್ಕಾರಿ ಮುಖ್ಯ ಸಚೇತಕ ಪಿ.ಎಂ.ಅಶೋಕ್ ನಡುವೆ ಚಟಾಪಟಿ ನಡೆದಿದೆ. ಅಶೋಕ್ ಪಟ್ಟಣ್ಣನವರ್ ಅವರನ್ನು ತರಾಟಗೆ ತೆಗೆದುಕೊಂಡ ಕೋನರೆಡ್ಡಿ ಅವರು, ಸರ್ವಪಕ್ಷ ಸಭೆಗೆ ಮಹದಾಯಿ ಹೋರಾಟಗಾರರನ್ನೇ ಆಹ್ವಾನಿಸಿಲ್ಲ. ಕಳೆದ ಮೂರು ವರ್ಷಗಳಿಂದ ನೀರಿಗಾಗಿ ಆಗ್ರಹಿಸಿ ಸತ್ಯಾಗ್ರಹ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಆ ಹೋರಾಟಗಾರರನ್ನು ಈ ಸಭೆಗೆ ಕರೆಯಬೇಕಿತ್ತು. ತಮಗಿಷ್ಟಬಂದವರಿಗೆ ಆಹ್ವಾನ ನೀಡಲಾಗಿದೆ. ಇದು ಸರ್ವಪಕ್ಷ ಸಭೆಯಾಗಿದೆ. ಪಕ್ಷಗಳ ಮುಖಂಡರನ್ನು ಆಹ್ವಾನಿಸಲಾಗಿದೆ ಎಂದು ಅಶೋಕ್ ಪಟ್ಟಣ್ ಸಮಜಾಯಿಷಿ ನೀಡಲು ಮುಂದಾದರು. ಈ ಸಂದರ್ಭದಲ್ಲಿ ಮಾತಿನಚಕಮಕಿ ನಡೆಯಿತು. ವಿಕಾಸಸೌಧದಿಂದ ಸಚಿವ ವಿನಯ್ಕುಲಕರ್ಣಿ ಹಾಗೂ ಎಂಎಸ್ಐಎಲ್ ಅಧ್ಯಕ್ಷ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ಮಹದಾಯಿ ಹೋರಾಟಗಾರರು ವಿಧಾನಸೌಧಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆಯಲೆತ್ನಿಸಿದಾಗ ಮತ್ತೆ ಮಾತಿನ ಚಕಮಕಿ ನಡೆಯಿತು. ಜೆಡಿಎಸ್ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ಅವರು ಮಧ್ಯಪ್ರವೇಶಿಸಿ ರೈತ ಮುಖಡರನ್ನು ಒಳಗೆ ಕರೆತಂದರು.
Comments