ಮೈಸೂರಿನ ವರುಣಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಪಿ.ಜಿ.ಆರ್. ಸಿಂಧ್ಯ ಸ್ಪರ್ಧೆ?

30 Oct 2017 9:47 AM | Politics
4351 Report

ದಶಕಕ್ಕೂ ಹೆಚ್ಚು ಕಾಲ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದ ಹಿರಿಯ ರಾಜಕಾರಣಿ ಸಿಂಧ್ಯ ಸೋಮವಾರ ಮರಳಿ ಜೆಡಿಎಸ್‌ ಸೇರಲಿದ್ದಾರೆ. ಸಿದ್ದರಾಮಯ್ಯ ಶಕ್ತಿ ಕುಗ್ಗಿಸಲು ಸಿದ್ಧತೆ ನಡೆಸಿರುವ ಜೆಡಿಎಸ್ ವರಿಷ್ಠರು ಸಿಂಧ್ಯ ಅವರನ್ನು ವರುಣಾದಲ್ಲಿ ಕಣಕ್ಕೆ ಇಳಿಸಲು ಚಿಂತನೆ ನಡೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಮೈಸೂರಿನ ವರುಣಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಪಿ.ಜಿ.ಆರ್. ಸಿಂಧ್ಯ ಕಣಕ್ಕಿಳಿಯುವ ಸಾಧ್ಯತೆ ಇದೆ.ಹಾಲಿ ಪ್ರತಿನಿಧಿಸುವ ವರುಣಾ ಕ್ಷೇತ್ರವನ್ನು ತಮ್ಮ ಪುತ್ರ ಡಾ. ಯತೀಂದ್ರ ಅವರಿಗೆ ಬಿಟ್ಟುಕೊಟ್ಟು, ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದರಾಮಯ್ಯ ತಯಾರಿ ನಡೆಸಿದ್ದಾರೆ. ವರುಣಾದಲ್ಲಿ ಒಕ್ಕಲಿಗರು, ಲಿಂಗಾಯಿತರು ಮತ್ತು ಹಿಂದುಳಿದ ವರ್ಗಗಳ ಮತದಾರರ ಸಂಖ್ಯೆ ಹೆಚ್ಚು. ಈ ಲೆಕ್ಕಾಚಾರದಲ್ಲಿ ಸಿಂಧ್ಯ ಅವರನ್ನು ಕಣಕ್ಕೆ ಇಳಿಸಿ, ಸಿದ್ದರಾಮಯ್ಯ ಅವರನ್ನು ಮೈಸೂರಿನಲ್ಲೇ ಕಟ್ಟಿ ಹಾಕುವ ಚಿಂತನೆ ಜೆಡಿಎಸ್‌ ವರಿಷ್ಠರದ್ದಾಗಿದೆ.

ಭಾನುವಾರ ಸಂಜೆ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದ ಸಿಂಧ್ಯ ಪಕ್ಷಕ್ಕೆ ಮರು ಸೇರ್ಪಡೆಯಾಗುವ ಕುರಿತು ಮಾತುಕತೆ ನಡೆಸಿದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಉಪಸ್ಥಿತರಿದ್ದರು.ಮಾತುಕತೆ ವೇಳೆ ವರುಣಾದಿಂದ ಸ್ಪರ್ಧಿಸುವ ಬಗ್ಗೆ ಪ್ರಾಸಂಗಿಕವಾಗಿ ಚರ್ಚೆ ನಡೆಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.

 

Edited By

Shruthi G

Reported By

Shruthi G

Comments