2018ರ ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಪ್ರಕಟವಾಗಿದ್ದು, ಶ್ರೀಧರ್ ದೊಡ್ಡಮನಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಇಲಾಖೆ ಪ್ರಧಾನಕಾರ್ಯದರ್ಶಿ ಡಾ.ರಾಜ್ಕುಮಾರ್ ಕತ್ರಿ, ಇಂಜನಿಯರಿಂಗ್ ಹಾಗೂ ಬಿಎಸ್ಸಿ ಅಗ್ರಿಕಲ್ಚರ್ನಲ್ಲಿ ಶ್ರೀಧರ್ ದೊಡ್ಡಮನಿ ಪ್ರಥಮ ರ್ಯಾಂಕನ್ನು ಪಡೆದಿದ್ದು, ಬಿವಿಎಸ್ಸಿಯಲ್ಲಿ ವಿನೀತ್ ಮೆಗೂರ್ ಹಾಗೂ ಬಿ ಫಾರ್ಮಾ-ಫಾರ್ಮಾ ಡಿಯಲ್ಲಿ ತುಹಿನ್ ಗಿರಿನಾಥ್ ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ವಿಜಯನಗರದ ಎಕ್ಸಲೆಂಟ್ ಪಿಯು ಕಾಲೇಜು ವಿದ್ಯಾರ್ಥಿ ಶ್ರೀಧರ್ ದೊಡ್ಡಮನಿ ಪ್ರಥಮ ಸ್ಥಾನ ಪಡೆದರೆ, ದಕ್ಷಿಣ ಕನ್ನಡದ ನಾರಾಯಣ ಪೈ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಒಟ್ಟು 1,98,639 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದಿದ್ದರು. ಅದರಲ್ಲಿ ಇಂಜನಿಯರಿಂಗ್ನಲ್ಲಿ 1,46,063 ಮಂದಿ, ಕೃಷಿ ಕೋರ್ಸ್ಗೆ 1,13,999 ಮಂದಿ, ಪಶುಸಂಗೋಪನೆ 1,15,364, ಬಿ ಫಾರ್ಮಾದಲ್ಲಿ 1,47,543 ವಿದ್ಯಾರ್ಥಿಗಳು ಈ ಬಾರಿ ಅರ್ಹತೆ ಪಡೆದಿದ್ದಾರೆ. ಕಳೆದ ಬಾರಿ 1.08 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಈ ವರ್ಷ ಏ.19ರಿಂದ 20ರವರೆಗೆ ಸಿಇಟಿ ಪರೀಕ್ಷೆ ನಡೆದಿತ್ತು. ಜೂ.25ರಿಂದ ಮೊದಲ ಹಂತದ ಕೌನ್ಸಿಲಿಂಗ್ ಪ್ರಕ್ರಿಯೆ ಆರಂಭವಾಗಲಿದ್ದು, ಆ.18ಕ್ಕೆ ಕೊನೆಯ ಹಂತದ ಕೌನ್ಸಿಲಿಂಗ್ ನಡೆಯಲಿದೆ. ವೆಬ್ಸೈಟ್ಗಳಲ್ಲಿ ಇಂದು ಮಧ್ಯಾಹ್ನ 3 ಗಂಟೆಯಿಂದ ಫಲಿತಾಂಶ ಪ್ರಕಟಗೊಂಡಿದೆ. ಸುದ್ದಿಗೋಷ್ಠಿಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಮಂಜುಳಾ ಮತ್ತಿತರರಿದ್ದರು.
Comments