ವರನಟ ನೆಟ್ಟು ನೀರೆರೆದಿದ್ದ ಪಿಂಕ್ ಫ್ಲವರ್ ಗಿಡದ ಸಂರಕ್ಷಣೆಗೆ ಮುಂದಾದ ಬಿಬಿಎಂಪಿ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಅನ್ನೋದನ್ನ ನಾವೆಲ್ಲರೂ ಕೂಡ ತಿಳಿಯಬೇಕು. ಪರಿಸರ ಚನ್ನಾಗಿದ್ದರೆ ನಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಅದರಲ್ಲೂ ಬೆಂಗಳೂರಿನಂತಹ ನಗರಗಳಲ್ಲಿ ಕಾರ್ಖಾನೆಗಳಿಂದ ಬರುವ ಹೊಗೆ , ವಾಹನಗಳಿಂದ ಬರುವ ಹೊಗೆಗಳಿಂದ ಪರಿಸರ ಹಾಳಾಗುವುದರ ಜೊತೆಗೆ ನಮ್ಮ ನಿಮ್ಮೆಲ್ಲರ ಆರೋಗ್ಯ ಕೂಡ ಹಾಳಾಗುತ್ತದೆ.
ಬೆಂಗಳೂರಿನ ಸಜ್ಜನ್ ರಾವ್ ವೃತ್ತದ ಉದ್ಯಾನವನದಲ್ಲಿರುವ ಪಿಂಕ್ ಫ್ಲವರ್ ಗಿಡ ಸಂರಕ್ಷಣೆಗೆ ಇದೀಗ ಬಿಬಿಎಂಪಿ ಮುಂದಾಗಿದೆ. ಈ ಗಿಡವನ್ನು ನೆಟ್ಟಿದ್ದು ವರನಟ ಡಾ. ರಾಜ್ ಕುಮಾರ್. ನೆಲಕ್ಕೆ ಬಾಗಿದ್ದ ಗಿಡವನ್ನು ನಿಲ್ಲಿಸಲಾಗಿದ್ದು, ಮಳೆ ಮತ್ತು ಗಾಳಿಗೆ ಬೀಳದಂತೆ ಹಗ್ಗಗಳಿಂದ ಎಳೆದು ಕಟ್ಟಲಾಗಿದೆ.
ಸಜ್ಜನ್ ರಾವ್ ವೃತ್ತದ ಮಧ್ಯಭಾಗದಲ್ಲಿರುವ ಪಾರ್ಕ್ ನಲ್ಲಿ ಪದ್ಮಭೂಷಣ ಡಾ. ರಾಜ್ ಕುಮಾರ್ ಅವರು ಪಿಂಕ್ ಫ್ಲವರ್ ಗಿಡವನ್ನು ನೆಟ್ಟು ನೀರೆದಿದ್ದರು. ಇದೀಗ ಆ ಗಿಡ ಬೃಹತ್ ಮರವಾಗಿ ಬೆಳೆದುನಿಂತಿದೆ. ಗಿಡದ ಸುತ್ತ ಕಬ್ಬಿಣದ ಬೇಲಿಯನ್ನು ನಿರ್ಮಿಸಿ ಬಂದೋಬಸ್ತ್ ಅನ್ನು ಮಾಡಲಾಗಿತ್ತು. ಇತ್ತಿಚಿಗೆ ಬಂದಂತಹ ಮಳೆ ಗಾಳಿಗೆ ಮರದ ಬುಡ ಕುಸಿದುಕೊಂಡು ನೆಲಕ್ಕೆ ಬಿದ್ದಿತ್ತು.
ಈ ವಿಷಯವಾಗಿ ಅಲ್ಲಿಯ ಸ್ಥಳಿಯರು ಕೂಡ ಬೇಸರವನ್ನು ವ್ಯಕ್ತ ಪಡಿಸಿದ್ದರು. ಇದ್ದಕ್ಕೆ ಸ್ಪಂದಿಸಿದಂತಹ ಅಧಿಕಾರಿಗಳು ಮರವನ್ನು ಸಂರಕ್ಷಿಸುವುದಾಗಿ ಭರವಸೆಯನ್ನು ನೀಡಿದ್ದರು ಕೂಡ. ಅದರಂತೆ ಬಿಬಿಎಂಪಿ ಸಿಬ್ಬಂದಿ ಗಿಡವನ್ನು ಎತ್ತಿ ನಿಲ್ಲಿಸಿ ಹಗ್ಗ ಕಟ್ಟಿ ಬೀಳದಂತೆ ಸಂರಕ್ಷಿಸಿದ್ದಾರೆ. ಡಾ.ರಾಜ್ ಈಗ ನಮ್ಮೊಟ್ಟಿಗೆ ಇಲ್ಲ. ಆದರೂ ಕೂಡ ಅವರು ಮಾಡಿರುವ ಕೆಲವೊಂದು ಕೆಲಸಗಳು ಪದೇ ಪದೇ ಅವರನ್ನ ನೆನೆಯುವಂತೆ ಮಾಡುತ್ತದೆ.
Comments