ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ, ಮಹದಾಯಿ ನೀರಿಗಾಗಿ ಮಾತ್ರ : ಸೊಬರದಮಠ

ಮಹದಾಯಿ ಹೋರಾಟದ 903ನೇ ದಿನವಾದ ಬುಧವಾರ ಇಲ್ಲಿ ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ನೇತೃತ್ವದಲ್ಲಿ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಸಭೆ ನಡೆಯಲಿದೆ. 4 ಜಿಲ್ಲೆಗಳ 9 ತಾಲ್ಲೂಕುಗಳ ಮಹದಾಯಿ ಹೋರಾಟ ಸಮನ್ವಯ ಸಮಿತಿ ಸದಸ್ಯರು ಸೇರಿ 150ಕ್ಕೂ ಹೆಚ್ಚು ರೈತರು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸದ್ಯ ಬೇರೆ ಬೇರೆ ಜಿಲ್ಲೆಗಳಿಂದ ರೈತರು ಧರಣಿ ವೇದಿಕೆಗೆ ಬರುತ್ತಿದ್ದಾರೆ.
'ಈ ಸಭೆಯಲ್ಲಿ ಮುಂದಿನ ಮಹದಾಯಿ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಲಾಗುವುದು. ಬಿಜೆಪಿ ಕರೆ ನೀಡಿರುವ ಬಂದ್ಗೂ, ರೈತರ ಸಭೆಗೂ ಯಾವುದೇ ಸಂಬಂಧವಿಲ್ಲ. ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ಮಹದಾಯಿ ನೀರಿಗಾಗಿ ಮಾತ್ರ' ಎಂದು ವೀರೇಶ ಸೊಬರದಮಠ ಹೇಳಿದರು.
ಎರಡು ಕಡೆ ಸಮಾವೇಶ: ಮಹದಾಯಿ ಹೋರಾಟ ವೇದಿಕೆಯಲ್ಲೇ ರೈತರ ಸಭೆ ನಡೆಯುತ್ತಿದ್ದರೆ, ಇದಕ್ಕೆ ಹೊಂದಿಕೊಂಡಂತೆ ಹುಬ್ಬಳ್ಳಿ- ವಿಜಯಪುರ ರಸ್ತೆ ಪಕ್ಕದಲ್ಲಿ ಬಿಜೆಪಿ ರೈತ ಮೋರ್ಚಾ ಘಟಕದ ವತಿಯಿಂದ ಬಹಿರಂಗ ಸಮಾವೇಶ ನಡೆಯಲಿದೆ.
ನರಗುಂದದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಗಿದೆ. ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಸಿ.ಪಾಟೀಲ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಕಳಕಪ್ಪ ಬಂಡಿ ಸೇರಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಪಕ್ಷದ ಧ್ವಜ ಹಿಡಿದುಕೊಂಡು, ತಮಟೆ ಬಾರಿಸುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Comments