ರಾಷ್ಟ್ರಪತಿ ಜೊತೆಗಿನ ಫೋಟೋ ಸೆಷನ್ ಬಹಿಷ್ಕರಿಸಿದ ಜೆಡಿಎಸ್

ಬೆಂಗಳೂರು : ರಾಷ್ಟ್ರಪತಿ ಅವರ ಜೊತೆಗಿನ ಗ್ರೂಪ್ ಫೋಟೋ ಸೆಷನ್ ಅನ್ನು ಜೆಡಿಎಸ್ ಬಹಿಷ್ಕರಿಸಿದೆ. ವಿಧಾನಸೌಧದ ವಜ್ರಮಹೋತ್ಸವದ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜಂಟಿ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ ಬಳಿಕ ವಿಧಾನಸೌಧ, ವಿಕಾಸಸೌಧ ನಡುವೆ ಇರುವ ಗಾಂಧಿ ಪ್ರತಿಮೆ ಎದುರು ಉಭಯ ಸದನಗಳ 300 ಮಂದಿ ಶಾಸಕರ ಜೊತೆ ಗುಂಪು ಫೋಟೋ ತೆಗೆಸಿಕೊಳ್ಳುವ ಕಾರ್ಯಕ್ರಮ ನಿಗದಿಯಾಗಿತ್ತು.
ಜೆಡಿಎಸ್ ಶಾಸಕರು ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸ್ಥಳಕ್ಕಾಗಮಿಸಿದರಾದರೂ ಅಲ್ಲಿ ಸರಿಯಾದ ಶಿಷ್ಟಾಚಾರ ಪಾಲನೆಯಾಗಿರಲಿಲ್ಲ. ಜಗದೀಶ್ ಶೆಟ್ಟರ್ ಅವರಿಗೆ ಮೊದಲ ಸಾಲಿನಲ್ಲಿ ಕುರ್ಚಿ ಹಾಕಲಾಗಿತ್ತು. ಅದೇ ರೀತಿ ಜೆಡಿಎಸ್ನ ಶಾಸಕಾಂಗ ಪಕ್ಷದ ನಾಯಕರಾದ ಕುಮಾರಸ್ವಾಮಿ ಅವರಿಗೆ ಕುರ್ಚಿ ಹಾಕಬೇಕಾಗಿತ್ತಾದರೂ ಶಿಷ್ಟಾಚಾರ ಪಾಲನೆಯಾಗಿರಲಿಲ್ಲ.
ಇತ್ತೀಚೆಗಷ್ಟೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಕುಮಾರಸ್ವಾಮಿಯವರು ಅಲ್ಲಿಗೆ ಬಂದಾಗ ಕುಳಿತುಕೊಳ್ಳಲು ಅವರಿಗೆ ಕುರ್ಚಿ ಇರಲಿಲ್ಲ. ಜೆಡಿಎಸ್ನ ಅತ್ಯಂತ ಹಿರಿಯ ವಿಧಾನಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ ಅವರಿಗೂ ಯಾವುದೇ ಕುರ್ಚಿ ಇರಲಿಲ್ಲ. ಇದರಿಂದ ಸಿಟ್ಟಾದ ಜೆಡಿಎಸ್ ಶಾಸಕರು ಫೋಟೋ ಸೆಷನ್ ಅನ್ನು ಬಹಿಷ್ಕರಿಸುವಂತೆ ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹೇರಿದರು.ಶಾಸಕರ ಒತ್ತಡಕ್ಕೆ ಮಣಿದ ಕುಮಾರಸ್ವಾಮಿ ಅಲ್ಲಿಂದ ನಿರ್ಗಮಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾರೆ. ರೈತರು ತೊಂದರೆಯಲ್ಲಿದ್ದಾರೆ. ಇಂತಹ ಕಾರ್ಯಕ್ರಮಗಳಿಗೆ ಅದ್ಧೂರಿ ವೆಚ್ಚ ಬೇಕಿರಲಿಲ್ಲ. ಈ ಹಿನ್ನೆಲೆಯಲ್ಲಿ ತಾವು ವಜ್ರಮಹೋತ್ಸವದಲ್ಲಿ ಏರ್ಪಡಿಸಿರುವ ಭೋಜನಕೂಟದಲ್ಲಿ ಭಾಗವಹಿಸುವುದಿಲ್ಲ ಮತ್ತು ಫೋಟೋ ತೆಗೆಸಿಕೊಳ್ಳುವುದರಲ್ಲೂ ನನಗೆ ಆಸಕ್ತಿ ಇರಲಿಲ್ಲ. ಹಾಗಾಗಿ ನಿರ್ಗಮಿಸುತ್ತಿದ್ದೇವೆ ಎಂದು ಹೇಳಿದರು.
Comments