ವಜ್ರಮಹೋತ್ಸವದಲ್ಲಿ ಗುಟುಕು ನೀರು ಕುಡಿಯದಂತೆ ಶಾಸಕರಿಗೆ ಎಚ್ ಡಿಕೆ ಸೂಚನೆ

ಬೆಂಗಳೂರು: 60ರ ಸಂಭ್ರಮದ ಹಿನ್ನಲೆಯಲ್ಲಿ ವಿಧಾನಸೌಧ ಬಣ್ಣ ಬಣ್ಣದ ದೀಪಗಳಿಂದ ಅಲಂಕೃತಗೊಂಡು ಝಗಮಗಿಸುತ್ತಿದೆ. ವಿಧಾನಸೌಧ ವಜ್ರಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಇದಕ್ಕಾಗಿ ಕೋಟಿಗಟ್ಟಲೇ ಹಣವನ್ನು ಸುರಿಯಲಾಗಿದೆ.
ವಜ್ರಮಹೋತ್ಸವದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರ ಊಟಕ್ಕೆ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿರುವುದಕ್ಕೆ ಜೆಡಿಎಸ್ ರಾಜ್ಯಾದ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅಸಮಧಾನ ವ್ಯಕ್ತಪಡಿಸಿದ್ದಾರೆ.ಇನ್ನು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಶಾಸಕರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ. ಆದರೆ, ಯಾರೂ ಸಹ ಅಲ್ಲಿ ಊಟ ಮಾಡಬಾರದು. ಅಷ್ಟೇ ಅಲ್ಲದೇ ಕಾರ್ಯಕ್ರಮದಲ್ಲಿ ಒಂದು ಗುಟುಕು ನೀರು ಕುಡಿಯದೆ ರಾಷ್ಟ್ರಪತಿ ಭಾಷಣ ಮುಗಿಯುತ್ತಿದ್ದಂತೆಯೇ ಎಲ್ಲರೂ ವಿಧಾನಸೌಧದಿಂದ ಹೊರಬರಬೇಕು ಎಂದು ಸೂಚಿಸಿದ್ದಾರೆ.
ಮಧ್ಯಾಹ್ನ 1.30ಕ್ಕೆ ವಿಧಾನಸೌಧದ ಹುಲ್ಲುಹಾಸಿನ ಮೇಲೆ ಭೋಜನಕೂಟವನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನ 3ರಿಂದ 5ರವರೆಗೆ ವಿಧಾನಸೌಧ ಕಟ್ಟಡ ನಿರ್ಮಾಣ ಕುರಿತಾದ ಸಾಕ್ಷ್ಯಚಿತ್ರ ಹಾಗೂ ವಿಧಾನಮಂಡಲ ಶಾಸನಸಭೆ ನಡೆದುಬಂದ ಹಾದಿ ಸಾಕ್ಷ್ಯಚಿತ್ರ ಪ್ರದರ್ಶನವಾಗಲಿದೆ.ಸಂಜೆ 5ರಿಂದ 6ರವರೆಗೆ ವಿವಿಧ ಜಾನಪದ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ಸಂಜೆ 6ರಿಂದ 6.30ರವರೆಗೆ ಗೌರವ ಸಮರ್ಪಣೆ 6.30ರಿಂದ ಹಂಸಲೇಖ ಹಾಗೂ ತಂಡದಿಂದ ರಸಮಂಜರಿ ಪ್ರಸ್ತುತಗೊಳ್ಳಲಿದೆ.ಸಮಾನಾಂತರವಾಗಿ ವಿಧಾನಸೌಧ ಕಟ್ಟಡದ ಮೇಲೆ 3ಡಿ ಮ್ಯಾಪಿಂಗ್ ಮೂಲಕ ಸರ್ಕಾರದ ಯೋಜನೆಗಳ ಚಿತ್ರ ಪ್ರದರ್ಶನಗೊಳ್ಳಲಿದೆ.
Comments