ಗೌರಿ ಹಂತಕರ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ: ರಾಮಲಿಂಗಾ ರೆಡ್ಡಿ

ಪತ್ರಕರ್ತೆ ಗೌರಿ ಲಂಕೇಶ್ ರನ್ನು ಹತ್ಯೆ ಮಾಡಿದ ಕೊಲೆಗಾರರ ಕುರಿತು ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಕರ್ನಾಟಕ ರಾಜ್ಯ ಗೃಹ ಸಚಿವ ರಾಮಲಿಂಗಾರೆಡ್ಡಿ ಘೋಷಿಸಿದ್ದಾರೆ.
ವಿಕಾಸ ಸೌಧದಲ್ಲಿ ನಾಳೆ ಪೊಲೀಸ್ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಲಿರುವ ಸರ್ಕಾರ ಗೌರಿ ಲಂಕೇಶ್ ಹಂತಕರ ಬಂಧನದ ಕುರಿತು ಚರ್ಚೆ ನಡೆಸಲಿದೆ. ಗೌರಿ ಹಂತಕರ ಕುರಿತು ಯಾವುದೇ ಮಾಹಿತಿ ದೊರಕಿದಲ್ಲಿ 09480800202 ಅಥವಾ sit.glankesh@ksp.gov.in ಇಮೇಲ್ ಗೆ ಮಾಹಿತಿ ನೀಡುವಂತೆ ಬೆಂಗಳೂರು ಸಿಟಿ ಪೊಲೀಸರು ಟ್ವೀಟ್ ಮಾಡಿ ತಿಳಿಸಿದ್ದಾರೆ.
ಸೆ.5 ರಂದು ರಾತ್ರಿ 8 ಗಂಟೆಗೆ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ರಾಜರಾಜೇಶ್ವರಿ ನಗರದಲ್ಲಿರುವ ಅವರ ಮನೆಯಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಲಂಕೇಶ್ ಪತ್ರಿಕೆಯ ಸಂಪಾದಕಿಯಾಗಿದ್ದ ದಿಟ್ಟ ಪತ್ರಕರ್ತೆ ಗೌರಿ ಅವರ ಹತ್ಯೆಯನ್ನು ಇಡೀ ರಾಜ್ಯದ ಜನತೆಯೂ ಖಂಡಿಸಿತ್ತು.
Comments