ರಾಜ್ಯದಲ್ಲಿ ಮೋಡ ಬಿತ್ತನೆಗೆ ಸಿದ್ಧತೆ

ಬೆಂಗಳೂರು: ರಾಜ್ಯದಲ್ಲಿ ಮೋಡ ಬಿತ್ತನೆ ಆರಂಭವಾಗಿದ್ದು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಆಡಳಿತ ಸಂಕೀರ್ಣ ನಾಯಕ್ ಭವನದ ಮೇಲೆ 40 ಎತ್ತರದ ರಾಡಾರ್ ಸ್ಥಾಪನೆಯ ಕಾರ್ಯ ಭರದಿಂದ ಸಾಗುತ್ತಿದೆ. ನೂರು ಅಡಿ ಎತ್ತರದ ಆರು ಮಹಡಿ ಆಡಳಿತ ಸಂಕೀರ್ಣದ ಮೇಲೆ 40 ಅಡಿ ಎತ್ತರದ ರಾಡಾರ್ ಸಿದ್ಧತೆಗೆ ಬೇಕಾಗಿರುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ರಾಡಾರ್ ಸ್ಥಾಪನೆ ಕಾರ್ಯ ಪೂರ್ಣಗೊಂಡ ಬಳಿಕ ಗದಗ್ ನಲ್ಲಿ ರಾಡಾರ್ ಸ್ಥಾಪನೆಯ ಕಾರ್ಯ ಭರದಿಂದ ಸಾಗಿದೆ. ಮೋಡ ಬಿತ್ತನೆಗೆ ಅಮೆರಿಕಾದಿಂದ ವಿಶೇಷವಾಗಿ ತರಿಸಲಾಗಿರುವ ವಿಮಾನ ಜಕ್ಕೂರು ವಿಮಾನ ನಿಲ್ದಾಣಕ್ಕೆ ಬಂದು ತಲುಪಿದೆ. ಈ ವಿಮಾನ ತಾಂತ್ರಿಕ ಪರಿಶೀಲನಾ ಕಾರ್ಯ ಪ್ರಾರಂಭಿಸಲಾಗಿದ್ದು, ವಿಮಾನವನ್ನು ಮೋಡ ಬಿತ್ತನೆಗೆ ಸಜ್ಜುಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೋಡ ಬಿತ್ತನೆ ಆಗಸ್ಟ್ 18ರಂದು ಪ್ರಾರಂಭವಾಗುವ ಸಾಧ್ಯತೆ ಇದೆ. ತಾಂತ್ರಿಕ ಕೆಲಸಗಳು ಭರದಿಂದ ಸಾಗುತ್ತಿವೆ. ಮಳೆಯ ಅವಶ್ಯಕತೆ ಇರುವ ಪ್ರದೇಶಗಳಲ್ಲಿ ಮಾತ್ರ ಮೋಡ ಬಿತ್ತನೆಯ ಕಾರ್ಯ ವನ್ನು ಕೈಗೊಳ್ಳಲಾಗುತ್ತಿದೆ. ಮೋಡ ಬಿತ್ತನೆಗೆ ಅಗತ್ಯವಿರುವ ಹಾಗೂ ಮಳೆಯ ಸಾಧ್ಯತೆಯನ್ನು ಹೊಂದಿರುವ ಮೋಡಗಳ ಲಭ್ಯತೆಯನ್ನು ಆಧರಿಸಿ ರಾಡಾರ್ ಚಿತ್ರಗಳು ಮತ್ತು ಸಂಕೇತಗಳನ್ನು ಆಧಾರದ ಮೇಲೆ ಮೋಡ ಬಿತ್ತನೆ ಕೈಗೊಳ್ಳಲಾಗುತ್ತಿದೆ.
Comments