ಬಾಣಂತಿ, ಮಗುವನ್ನ ರಕ್ಷಿಸಿದ ಸ್ಥಳೀಯರು..!

ಬೆಂಗಳೂರು: ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ತೋಯ್ದು ತೊಪ್ಪೆಯಾಗಿದೆ. ಕೋರಮಂಗಲ, ಮಡಿವಾಳ, ಈಜೀಪುರ,ವಿಲ್ಸನ್ ಗಾರ್ಡನ್, ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಶಾಂತಿನಗರ, ಸಿಲ್ಕ ಬೋರ್ಡ್ ಸೇರಿದಂತೆ ನಗರದ ಹಲವೆಡೆ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ತಗ್ಗು ಪ್ರದೇಶದ ಮನೆಗಳು, ಕ್ವಾಟ್ರಸ್`ಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿದೆ.
ಹಲವೆಡೆ ರಸ್ತೆಗಳು ಜಲಾವೃತವಾಗಿದ್ದು, ಜನರು ಪರದಾಡುತ್ತಿದ್ದಾರೆ. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ರಾತ್ರಿ ಇಡೀ ಜನ ನಿದ್ದೆ ಮಾಡದೇ ಕಳೆದಿದ್ದಾರೆ. ಕೆಳಮಹಡಿ ಜಲಾವೃತವಾಗಿದ್ದರಿಂದ ಮೊದಲ ಮಹಡಿಗೆ ಬಂದು ವಾಸ್ತವ್ಯ ಹೂಡಿದ ಬಗ್ಗೆಯೂ ವರದಿಯಾಗಿದೆ. ಶಾಂತಿನಗರ ಬಸ್ ನಿಲ್ದಾಣದಲ್ಲಿ ನೀರು ತುಂಬಿದ್ದರಿಂದ ಬಸ್`ಗಳನ್ನ ಹೊರತೆಗೆಯಲಾಗದೇ ಚಾಲಕರ ಕೆಲ ಕಾಲ ಪರಿತಪಿಸಿದ್ದುಂಟು. ಮಳೆ ನೀರಿನ ಜೊತೆ ಹಾವುಗಳು ಸಹ ಮನೆಗೆ ನುಗ್ಗಿದ್ದ ಬಗ್ಗೆ ವರದಿಯಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್`ನಲ್ಲಿ ಹೊಳೆಯಂತೆ ನೀರು ತುಂಬಿದೆ. ಮಳೆಯ ಆರ್ಭಟಕ್ಕೆ ಸಿಲ್ಕ್ ಬೊರ್ಡ್ ಹೆಡ್ ಆಫೀಸ್ ಗ್ರಿಲ್ ಕೊಚ್ಚಿಹೋಗಿದೆ. ಕ್ವಾಟ್ರಸ್ ಮತ್ತು ಪಾರ್ಕಿಂಗ್ ಜಲವೃತವಾಗಿದ್ದು, ನಿವಾಸಿಗಳು ಹೊರಗೆ ತೆರಳಲಾರದೇ ಮನೆಯಲ್ಲೇ ಉಳಿದಿದ್ದಾರೆ.
ಇನ್ನು ಕೋರಮಂಗಲದ ಮನೆಯೊಂದು ಜಲಾವೃತಗೊಂಡಿದ್ದು, ಮನೆಯಲ್ಲಿದ್ದ ಬಾಣಂತಿ ಮತ್ತು 1 ತಿಂಗಳ ಮಗುವನ್ನ ಸಾರ್ವಜನಿಕರು ರಕ್ಷಿಸಿದ್ದಾರೆ. ನೀರಿನ ಪ್ರಮಾಣದ ಪಡಿಮೆಯಾದ ಹಿನ್ನೆಲೆಯಲ್ಲಿ ಸಂಬಂಧಿಕರ ಮನೆಗೆ ಅವರನ್ನ ಕಳುಹಿಸಲಾಗಿದೆ.
Comments