ಒಂದೇ ಕುಟುಂಬದ ಆರು ಜನರು ಆತ್ಮಹತ್ಯೆಗೆ ಶರಣು..!!
ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಆರು ಜನರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕೊಪ್ಪಳ ತಾಲೂಕಿನ ಮೆತಗಲ್ ಗ್ರಾಮದಲ್ಲಿ ನಡೆದಿದ್ದು, ಇಡೀ ಗ್ರಾಮದಲ್ಲಿ ಸೂತಕದ ವಾತಾವರಣ ಮೂಡಿದೆ.. ಶೇಖರಯ್ಯ ಬೀಡನಾಳ (42), ಪತ್ನಿ ಜಯಮ್ಮ(39), ಮಕ್ಕಳಾದ ಬಸಮ್ಮ (23), ಗೌರಮ್ಮ (20), ಸಾವಿತ್ರಿ (18), ಪಾರ್ವತಿ (16) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಗಳಾಗಿದ್ದಾರೆ. ಶೇಖರಯ್ಯ ತನ್ನ ಪತ್ನಿ ಮತ್ತು ನಾಲ್ವರು ಮಕ್ಕಳಿಗೆ ವಿಷ ಕುಡಿಸಿ ಬಳಿಕ ತಾನು ನೇಣಿಗೆ ಶರಣಾಗಿದ್ದಾನೆ.
ನಿನ್ನೆ ಸಂಜೆ 5 ಗಂಟೆ ವೇಳೆಗೆ ಹಾಕಿದ ಮನೆ ಬಾಗಿಲು ಬೆಳಗ್ಗೆಯಾದ್ರೂ ಓಪನ್ ಆಗದ ಕಾರಣ ಅನುಮಾನಗೊಂಡ ಪಕ್ಕದ ಮನೆಯವರು ಹಾಗೂ ಗ್ರಾಮಸ್ಥರು ಬಾಗಿಲು ತೆಗೆದು ನೋಡಿದ್ದಾರೆ. ಆ ಸಮಯದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ಶೇಖರಯ್ಯ ಸಾಕಷ್ಟು ಸಾಲ ಮಾಡಿಕೊಂಡಿದ್ದ. ತನ್ನ ಜಮೀನಿನಲ್ಲಿ ಒಂದಿಷ್ಟು ಜಮೀನು ಈಗಾಗಲೇ ಮಾರಿದ್ದ. ಇನ್ನುಳಿದ ಎರಡು ಎಕರೆ ಜಮೀನು ಮಾರಾಟ ಮಾಡಲು ಸಿದ್ದನಾಗಿದ್ದ. ಸಾಲ ಬಾಧೆಯಿಂದ ಶೇಖರಯ್ಯ ಈ ನಿರ್ಧಾರ ಮಾಡಿದ್ದಾನೆ ಎಂದು ಗ್ರಾಮಸ್ಥರು ಹಾಗೂ ಸಂಬಂಧಿಕರು ತಿಳಿಸಿದ್ದಾರೆ. ಈ ಪ್ರಕರಣವಾಗಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
Comments