ವಿಧಾನಸಭೆಯಲ್ಲಿ ಮೆಗ್ಗಾನ್ ಆಸ್ಪತ್ರೆ ಘಟನೆ ಬಗ್ಗೆ ಪ್ರತಿಧ್ವನಿ

ಬೆಂಗಳೂರು: ವಿಧಾನಸಭೆಯಲ್ಲಿ ಇವತ್ತು ಮೆಗ್ಗಾನ್ ಆಸ್ಪತ್ರೆ ಘಟನೆ ಕುರಿತು ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಯನ್ನು ಆತನ ಪತ್ನಿ ಎಳೆದೊಯ್ದು ಘಟನೆಯನ್ನು ವಿಧಾನಸಭೆ ಕಲಾಪದ ಶೂನ್ಯ ವೇಳೆಗೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪ್ರಸ್ತಾಪಿಸಿದರು. ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಯನ್ನು ಸರಿಯಾಗಿ ನೋಡಿಕೊಂಡಿಲ್ಲ, ಈ ರೀತಿ ನಿರ್ಲಕ್ಷಕ್ಕೆ ಕಾರಣ ಯಾರು? ಆಸ್ಪತ್ರೆಯ ಡಿ ದರ್ಜೆ ನೌಕರರ ಅಮಾನತು ಇದಕ್ಕೆ ಪರಿಹಾರವಲ್ಲ, ಆಸ್ಪತ್ರೆ ಮುಖ್ಯಸ್ಥರ ಮೇಲೆ ಯಾಕೆ ಕ್ರಮ ಜರುಗಿಸಿಲ್ಲ ಎಂದು ಪ್ರಶ್ನಿಸಿದರು.
ಉಭಯ ಸದನಗಳ ಸದಸ್ಯರು ಸದನದ್ಲಲಿ ಗದ್ದಲದ ವಾತಾವರಣ ಸೃಷ್ಟಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಸ್ಪೀಕರ್ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು.
ಇದಕ್ಕೆ ಉತ್ತರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಮೆಗ್ಗಾನ್ ಆಸ್ಪತ್ರೆ ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತಿಸಿಲ್ಲ, ಅಲ್ಟ್ರಾಸೌಂಡ್ ಪರೀಕ್ಷೆಗೆ ತಿಳಿಸಲಾಗಿತ್ತು. ಸ್ಟ್ರೆಚರ್ ತರುವ ಮುನ್ನವೇ ಅವರು ಹಾಗೇ ಮಾಡಿದ್ದಾರೆ. ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದರು. ಈ ವೇಳೆ ಶರಣ ಪ್ರಕಾಶ್ ಉತ್ತರಕ್ಕೆ ತೃಪ್ತರಾಗದ ಶೆಟ್ಟರ್, ಅಮಾನತು ಮಾಡಿದರೆ ಸಾಲದು ಕಠಿಣ ಕ್ರಮ ತೆಗೆದುಕೊಳ್ಳುಬೇಕು ಎಂದು ಒತ್ತಾಯಿಸಿದರು.
Comments